Saturday, June 26, 2010

ಯಾಂತ್ರಿಕತೆಯತ್ತ ಸಾಗುತ್ತಿದೆ ನಮ್ಮ ಬದುಕು......

ನಮ್ಮ ಬದುಕು ಇಂದು ಯಾಂತ್ರಿಕತೆಯೆಂಬ ಮಾಂತ್ರಿಕನ ಕೈಯಲ್ಲಿ ಸಿಕ್ಕು ಹೊರಗೆ ಬಾರದ ಸ್ಥಿತಿಗೆ ತಲುಪಿದೆ. ಇದರ ಪರಿಣಾಮವಾಗಿ ನಾವೆಲ್ಲರೂ ಅಗ್ಗದ ಬದುಕಿಗೆ ಶರಣಾಗಿದ್ದೇವೆ. ಎಲ್ಲ ವಿಚಾರಗಳಲ್ಲಿ ಶ್ರಮವಿಲ್ಲದೇ ಕೆಲಸವಾಗಬೇಕೆನ್ನುವ ಮಾನಸಿಕತೆಯನ್ನು ಬೆಳಿಸಿಕೊಳ್ಳುತ್ತಿದ್ದೇವೆ. ಈ ಮಾನಸಿಕತೆ ಹಳ್ಳಿಪ್ರದೇಶದ ಜನರನ್ನು ಬಿಟ್ಟಿಲ್ಲ. ಮೊದಲು ಹಳ್ಳಿಗಳಿಗೆ ವಾಹನದ ವ್ಯವಸ್ಥೆ ಇಲ್ಲದಿರುವಾಗ ನಡೆದುಕೊಂಡು ಹೋಗುವ ಅಭ್ಯಾಸವಿತ್ತು. ಆದರೆ ಇಂದು ಆ ವ್ಯವಸ್ಥೆ ಬಂದ ತಕ್ಷಣ ಜನರ ಮಾನಸಿಕತೆಯೇ ಬೇರೆ ಆಗಿದೆ. ೩೦ನಿಮಿಷದಲ್ಲಿ ನಡೆದು ಹೋಗುವ ಸ್ಥಳಕ್ಕೆ ೧ ಘಂಟೆ ಕಾದು ಹಣಕೊಟ್ಟು ಹೋಗುವುದು ಇಂದು ಸಾಮಾನ್ಯವಾಗಿದೆ.
ಇದು ಚಿಕ್ಕಮಕ್ಕಳಿಂದಲೇ ಪ್ರಾರಂಭವಾಗುತ್ತದೆ. ಹಾಲು, ಹಣ್ಣು , ತರಕಾರಿಯಂತಹ ಸ್ವಾಭಾವಿಕವಾಗಿ ಪೌಷ್ಠಿಕತೆಯನ್ನು ನೀಡುವ ಆಹಾರಗಳನ್ನು ನೀಡದೆ, ಡಬ್ಬಗಳಲ್ಲಿ ಬರುವ ನಾನಾ ಹೆಸರಿನ (ವಿದೇಶಿಯವಾಗಿದ್ದರೆ ಇನ್ನೂ ಪ್ರಾಶಸ್ತ್ಯ) ಹುಡಿಗಳನ್ನು ಮಕ್ಕಳಿಗೆ ನೀರಿನಲ್ಲಿ ಕದಡಿ ನೀಡುತ್ತಿದ್ದೇವೆ. ಕಾರಣವೇನೆಂದರೆ ಈ ಆಹಾರ ಸೇವನೆಯಿಂದ ಮಕ್ಕಳ ಹೊಟ್ಟೆಯಲ್ಲಿ ಅರಗಲು ಸುಲಭವಂತೆ. ಮಕ್ಕಳ ಹೊಟ್ಟೆಗೆ ಅರಗಿಸುವ ಶ್ರಮ ತಪ್ಪಸಬೇಕಲ್ಲವೇ? ಅದಕ್ಕಾಗಿ ಇವುಗಳ ಬಳಕೆ. ಹಾಗೆ ಇಂದು ಮಾರುಕಟ್ಟೆಯಲ್ಲಿ ಸಿದ್ಧ ಆಹಾರಿನ ವ್ಯವಸ್ಥೆಗೆ ಅನೇಕ ಗೃಹಣಿಯರು ಹೋಗುತ್ತಿದ್ದಾರೆ. ಅರ್ಧ ಅರಗಿದ ಸಿದ್ಧ ಆಹಾರದ ಬಳಕೆಯು ದಿನದಂದ ದಿನಕ್ಕೆ ಹೆಚ್ಚುತ್ತಿದೆ. ಕಾರಳ ಆಡುಗೆ ಮಾಡುವ ಸಮಯ ಉಳಿಸುವುದು, ಕಷ್ಟಪಟ್ಟು ತರಕಾರಿ ಹೆಚ್ಚುವುದು, ಒಗ್ಗರಣೆ, ನೀರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುವುದು. ಈ ರೀತಿಯ ಕಷ್ಟದಿಂದ ಮುಕ್ತಿ ಪಡೆಯಲು.
ನವಿರು ನವಿರಾದ, ಆಕರ್ಷಕ ಬಟ್ಟೆಗಳನ್ನು ತೊಟ್ಟು ಉದ್ಯಾನವನಗಳಲ್ಲಿ ಗಾಳಿ ಸಂಚಾರ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಖೋ ಖೋ, ಕಬಡ್ಡಿ , ಕಾಲ್ಚೆಂಡು, ಹಾಕಿ - ಈ ರೀತಿ ಬೆವರು ಸುರಿಸಿ ಆಡುವ ಆಟಗಳ ಪ್ರಮಾಣ ದಿನೇ ದಿನೇ ಕುಂಠಿತವಾಗುತ್ತಿರುವುದು ಈ ರೀತಿಯ ಮಾನಸಿಕತೆಯಿಂದಲೇ ಅಲ್ಲವೆ? ಏಕೆಂದರೆ ಈ ಆಟಗಳೆಲ್ಲವೂ ಮೈಕೈಗೆ ಕಷ್ಟ - ನೋವು ಕೊಡುವಂಥಹವು ಹಾಗಾಗಿ ಈ ಆಟಗಳನ್ನು ನಮ್ಮ ಮಕ್ಕಳು ಆಯ್ಕೆ ಮಾಡುವುದಿಲ್ಲ ಹಾಗೂ ತಂದೆತಾಯಂದಿರೂ ಪೋತ್ಸಾಹಿಸುವುದಿಲ್ಲ. ಅದೇ ಕ್ರಿಕೇಟ್‌ಗೆ ಪೋತ್ಸಾಹವಿದೆ.
ಇನ್ನು ನಮ್ಮ ಸುಶಿಕ್ಷಿತ ಅಂದರೆ ವಿದ್ಯಾವಂತ ಜನರ ಮಾನಸಿಕತೆ ಹೇಗಾಗುತ್ತಿದೆ. ಒಂದು ಹಳ್ಳಿ ಪ್ರದೇಶದ ಬಸ್‌ನಲ್ಲಿ ೨೦ರಿಂದ ೨೫ ಜನ ಪ್ರಯಾಣಿಸುತ್ತಿದ್ದರು. ಆ ಬಸ್ ನಲ್ಲಿ ಇಬ್ಬರು ಸುಶಿಕ್ಷಿತ ಜನ ಇದ್ದರು. ಅವರ ವೇಶ ಭೂಷಣದಿಂದಲೇ ತಿಳಿಯುತ್ತಿತ್ತು. ಸೂಟು-ಬೂಟು ಧರಿಸಿದ್ದರು. ಮದ್ಯೆ ಬಸ್ ಹಾಳಾಯಿತು. ತಕ್ಷಣವೇ ಚಾಲಕ ಪ್ರಯಾಣಿಕರಿಗೆಲ್ಲ ವಿನಂತಿಸಿಕೊಂಡ ಕೆಳೆಗೆ ಇಳಿದ ಸ್ವಲ್ಪ ಬಸ್ ತಳ್ಳಿರಿ ಎಂದು. ಎಲ್ಲರೂ ಕೆಳಗೆ ಇಳಿದರು ಮತ್ತು ತಳ್ಳಲು ಪ್ರಾರಂಭಿಸಿದರು. ಆದರೆ ಈ ಇಬ್ಬರು ಮಾತ್ರ ಬಸ್ ತಳ್ಳಲು ತಪ್ಪಿಯೂ ಕೈ ಜೋಡಿಸಲೇ ಇಲ್ಲ. ಕಾರಣವೇನಂದರೆ ಉಳಿದವರಂತೆ ಮೈ ಬಗ್ಗಿಸಿ ಬಸ್ಸು ತಳ್ಳಿದ್ದರೆ, ಅವರಿಗಲ್ಲ ಅವರು ಹಾಕಿಕೊಂಡ ಬಟ್ಟೆಗೆ ಅವಮಾನವಾದಂತೆ ಆಲ್ಲವೆ? ಈ ರೀತಿಯ ದೃಷ್ಯಗಳು ನಮಗೆ ಬಹಳಷ್ಟು ಕಾಣಲು ಸಿಗುತ್ತವೆ. ಸಾಮಾನ್ಯರು ಕಷ್ಟಪಡುವುದು, ಪ್ರತಿಷ್ಠಿತರು ಕೈ ಬೀಸಿಕೊಂಡು ಹಿಂದಿನಿಂದ ಬರುವುದು. ಇಂದು ಸಮಾಜದಲ್ಲಿ ಶ್ರಮಕ್ಕಲ್ಲ ಆಲಸ್ಯಕ್ಕೆ ಪ್ರತಿಷ್ಠೆಯ ಪಟ್ಟ.
ನಾವು ಕಷ್ಟಪಡುವುದನ್ನು ಶ್ರಮ ವಹಿಸುವುದನ್ನು ಈ ಯಾಂತ್ರಿಕತೆಯಿಂದಾಗಿ ಒಂದೊಂದನ್ನೆ ಬಿಡುವತ್ತ ಸಾಗುತ್ತಿದ್ದೇವೆ. ಈ ರೀತಿ ಅನೇಕ ಸಂಗತಿಗಳಲ್ಲಿ ನಮಗೆ ಅನುಭವಕ್ಕೆ ಬರುತ್ತದೆ. ಮೊಬೈಲ್ ಫೋನಿನ ಬಳಕೆ ಇರಬಹುದು, ವಾಹನದ ಬಳಕೆ ಇರಬಹುದು ಅಂತೂ ಯಾವುದು ಅತ್ಯಂತ ಸುಲಭವೋ ಕಷ್ಟವಿಲ್ಲದೆಯೇ ಆಗುತ್ತದೆಯೋ ಅದನ್ನೆ ನಾವು ಒಪ್ಪಿಕೊಳ್ಳುತ್ತಿದ್ದೇವೆ. ಶಿಕ್ಷಣ ರಂಗವನ್ನು ಆಯ್ಕೆ ಮಾಡುವಾಗಲೂ ಮಕ್ಕಳ ಮಾನಸಿಕತೆ ಕೂಡಾ ಹೀಗೆ ಸುಲಭವಾದದ್ದನೇ ಆಯ್ದು ಕೊಳ್ಳುವುದು. ಪರಿಕ್ಷೆಯ ಪ್ರಶ್ನೆ ಪತ್ರಿಕೆ ಸರಳವಾಗಿರಲಿ, ಸರಳವಾದ ಪ್ರಶ್ನೆಗೆ ಉತ್ತರಿಸಿ ಹೆಚ್ಚು ಹೆಚ್ಚು ಅಂಕ ಬರಲಿ, ಹೀಗೆ ಕಷ್ಟಕ್ಕೆ ಕೈ ಹಾಕುವ ಪ್ರಯತ್ನವೇ ನಮ್ಮ ಸಮಾಜದಲ್ಲಿ ಕಡೆಮಾಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗೆ ಮುಂದುವರೆ ಇದರ ಪರಿಣಾಮ ದೇಶಕ್ಕೂ ಬರುವುದಿಲ್ಲವೇ? ನಾವು ನೀವೆಲ್ಲ ಸೇರಿದರೆ ತಾನೆ ಈ ದೇಶ ಆಗೋದು. ಹಾಗಾದೆರೆ ನಮ್ಮ ಮಾನಸಿಕತೆಯ ಆಧಾರದಲ್ಲೇ ಈ ದೇಶ ನಿಂತಿರುವುದು. ಮೇಲೆ ಕುಳಿತಿರುವುದು (ದೇಶವನ್ನಾಳುವ ರಾಜಕಾರಣಿಗಳು)ನಮ್ಮ ನಿಮ್ಮಲ್ಲಿ ಯ ಒಬ್ಬರು ತಾನೆ? ಹೀಗಿರುವಾಗ ಕಷ್ಟವನ್ನು ಎದಿರಿಸುವ ಮಾನಸಿಕತೆ ನಮ್ಮಲ್ಲಿ ತಂದುಕೊಳ್ಳುವುದು ಆವಶ್ಯಕವಿದೆ. ಕೈ ಕೆಸರಾದರೆ, ಬಾಯಿ ಮೊಸರಲ್ಲವೇ ಕೈ ಕೆಸರಾಗದಿದ್ದರೆ ಅಂದರೆ ಕಷ್ಟಪಡುವ ಪ್ರವೃತ್ತಿ ನಮ್ಮ ಜನರಲ್ಲಿ ಬಾರದಿದ್ದರೆ ಬಾಯಿ ಮೊಸರು ಆಗುವುದಾದರೂ ಹೇಗೆ.

Sunday, January 24, 2010

ಕೆಲವೇ ಗಂಟೆಗಳು ಬಾಕಿ... !!!!

ಇನ್ನು ಕೆಲವೆ ಗಂಟೆಗಳು ಬಾಕಿ ಉಳಿದಿವೆ ಗೊತ್ತಾ? ಯಾವುದಕ್ಕೆ ಅಂತಾ ಹೇಳಲೇ ಇಲ್ವಲ್ಲಾ.. ಇಂದು ಸಾಮಾನ್ಯ ಒಬ್ಬ ವ್ಯಕ್ತಿಯನ್ನು ತೆಗೆದುಕೊಂಡರೆ ಅವನ ಆಯುಷ್ಯ ೬೦ ವರ್ಷ ಅಂತ ಅಂದುಕೊಳ್ಳಬಹುದು. ಯಾಕಂದ್ರೆ ರೀತಿ ಇಂದಿನ ಪರಿಸ್ಥಿತಿ ಆಗಿದೆ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಈಗ ವಿಷಯಕ್ಕೆ ಬರೋಣ. ನಮ್ಮ ಬದುಕಿನ ವರ್ಷಗಳನ್ನು ಗಂಟೆಗಳಿಗೆ ಪರಿವರ್ತಿಸಿದಾಗ ನಮಗೆ ಸಿಗುವುದು ಕೇವಲ ೫೨೫೬೦೦ ಗಂಟೆಗಳು. ಲೇಖನ ಓದುವಾಗ ನಾವು ಎಷ್ಟು ಗಂಟೆಗಳನ್ನು ದಾಟಿ ಬಂದಿದ್ದೇವೆ ಅಂತ ಯೋಚಿಸಿ..

ಯಾಕಪ್ಪಾ ಈ ಗಂಟೆಯ ಲೆಕ್ಕಾಚಾರ ಅಂತಾ ಅನ್ಕೋತೀರಾ? ಹೌದು ನಮಗೆ ನಾವು ಸಾಗುವ ದೂರ ಎಷ್ಟಿದೆ ಅಂತ ಗೊತ್ತಾದರೆ, ನಮ್ಮ ಬದುಕನ್ನು ನಾವು ರೂಪಿಸುವಲ್ಲಿ ಸಹಾಯಕವಾಗಬಹುದು ಅನ್ನೋದು ನನ್ನ ನಂಬಿಕೆ. ರೇಸ್‌ನಲ್ಲಿ ಓಟದ ಗುರಿಯನ್ನು ಮೊದಲೇ ತಿಳಿಸಿದರೆ ನಮ್ಮ ವೇಗ ಎಷ್ಟಿರಬೇಕು ಎಂಬುದನ್ನು ಮೊದಲೇ ನಿಶ್ಚಯಿಸಲು ಅನುಕೂಲವಾಗುತ್ತದೆ. ಅಂದರೆ ನಾವು ಯಾವುದೇ ವಿಷಯವನ್ನೂ ದೂರದಲ್ಲಿಟ್ಟು ನೋಡಿದಾಗ ಅದು ನಮಗೆ ಅಷ್ಟೊಂದು ಮಹತ್ವದ ಸಂಗತಿ ಎಂದು ಕಾಣುವುದಿಲ್ಲ, ಅದನ್ನೆ ನಮ್ಮ ಬದುಕಿಗೆ ತಂದಾಗ ಅದರ ಮಹತ್ವವನ್ನು ನಾವು ಕಂಡುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ದುಡುಕಿ ಎಲ್ಲವನ್ನು ಒಂದೇ ದಿನದಲ್ಲಿ ಮುಗಿಸಬೇಕು ಎಂದು ಹೇಳುವುದಲ್ಲ. ಚಿಕ್ಕವರಿರುವಾಗ ಹೇಳಿದ ಕಥೆ ನೆನಿಪಿದೆಯಲ್ವಾ? ಆಮೆ ಮತ್ತು ಮೊಲದ ಕಥೆ. ಒಂದೇ ದಿನದಲ್ಲಿ ಎಲ್ಲ ಮುಗಿಸಲು ಹೋದರೆ ಹಾಗೆ ಆಗಬಹುದು.

ಹಾಗಾದರೆ ಬದುಕನ್ನು ಬದುಕುವುದು ಹೇಗೆ? ನಿಜವಾಗಿ ನಾವೆಲ್ಲ ಪುಣ್ಯವಂತರು ಯಾಕೆಂದರೆ ಮನುಷ್ಯರಾಗಿ ಹುಟ್ಟಿದ್ದೇವೆ. ಪ್ರಾಣಿಗಳಾಗಿ ಹುಟ್ಟಿದ್ದರೆ ನಮ್ಮ ಕಥೆ ಏನಾಗುತ್ತಿತ್ತೋ ಏನೋ? ಹಾಗಿರುವಾಗ ಸಿಕ್ಕ ಈ ಅಮೂಲ್ಯ ಗಂಟೆಗಳನ್ನು ನಾವು ವ್ಯರ್ಥಮಾಡುವುದು ಸರಿಯೇ? ನಮ್ಮನ್ನು ಒಳ್ಳೆಯ ಕೆಲಸಕ್ಕೆಂದೇ ಈ ಭೂಮಿಯ ಮೇಲೆ ಕಳಿಸಿರುವಾಗ ಅದನ್ನು ಸಾರ್ಥಕಗೊಳಿಸದೆ ಹೋದರೆ ಸರಿಯೆ? ಹಾಗಾದರೆ ಬದುಕಿನ ಸಾರ್ಥಕತೆ ಹೇಗೆ? ನಮ್ಮ ಜೀವನದಲ್ಲಿ ತೊಳಲಾಟಗಳು ತುಂಬಾ ಎದ್ದು ಕಾಣುತ್ತವೆ. ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ನೋವು ನಾವು ಅನುಭವಿಸುತ್ತೇವೆ.

ಮನಸ್ಸು ಆನಂದಮಯವಾಗಿರಬೇಕು. ಆಗ ಬದುಕಿನ ಸಾರ್ಥಕತೆ ತನ್ನಿಂದ ತಾನಾಗಿಯೇ ಬರುತ್ತದೆ. ಈ ಆನಂದ ಬರುವುದು ದುಖಃವನ್ನು ಬೆನ್ನತ್ತಿ ಹೋದಾಗ ಅಲ್ಲ, ಇರುವುದರಲ್ಲಿ ತೃಪ್ತಿ ಹೊಂದುವುದರಿಂದ.

ಒಂದು ಘಟನೆ: ಜೈಲಿನಲ್ಲಿ ಇಬ್ಬರು ಖೈದಿಗಳು ತಪ್ಪಿಸಲು ಹೊರಟರು. ಗೋಡೆ ತುಂಬಾ ಎತ್ತರ ಇತ್ತು. ಅಂತೂ ಏನೋ ಹರ ಸಾಹಸ ಮಾಡಿ ಗೋಡೆ ಹತ್ತಿದರು. ಹತ್ತಿದ ನಂತರ ಒಬ್ಬ ಖೈದಿ ಕೆಳಗೆ ನೋಡಿದ ಅಲ್ಲಿ ಕೆಸರು, ಕಸಕಡ್ಡಿ ಇತ್ತು. ಇನ್ನೊಬ್ಬ ಖೈದಿ ಮೇಲೆ ನೋಡಿದ ಅವನಿಗೆ ನಕ್ಷತ್ರಗಳಿಂದ ಮಿನುಗುತ್ತಿರುವ ಆಕಾಶ ಕಂಡಿತು, ಚಂದ್ರನ ಹೊಳೆಯುವ ಬೆಳಕು ಕಂಡಿತು. ಕೆಳಗೆ ನೋಡಿದಾತ ಜಗತ್ತನ್ನು ಕೆಸರಿಗೆ ಹೋಲಿಸಿಕೊಂಡು ಮರಳಿ ಜೈಲೇ ವಾಸಿ ಎಂದುಕೊಂಡು ಜೈಲಿಗೆ ಹೋದರೆ, ಜಗತ್ತು ಇಷ್ಟು ಸಂದರವಾಗಿದೆಯೇ ಎಂದು ಅಂದುಕೊಂಡು ಬದುಕಲು ಹೊರಟ ಇನ್ನೊಬ್ಬ ಖೈದಿ.

ಈ ಉದಾಹರಣೆಯಲ್ಲಿ ನಾವು ಕಂಡಂತೆ ನಮ್ಮ ಬದುಕು ಅಲ್ವೇ? ಹಾಗಾದರೆ ನಾವು ಈ ಬದುಕಿನ ಪ್ರತಿ ಹಂತದಲ್ಲೂ ಆನಂದವನ್ನು ಹುಡುಕುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲವೇ? ಪ್ರತಿ ವಸ್ತುವಿನಲ್ಲಿ ಆನಂದವನ್ನು ಭಗವಂತ ತುಂಬಿದ್ದಾನೆ. ಅದನ್ನು ನಾವು ಕಂಡುಕೊಳ್ಳಬೇಕು. ಇರುವವರಗೆ ಜೀವನವನ್ನು ಆನಂದಿಸಬೇಕು, ಹೋದ ನಂತರದ ವಿಷಯ ಬೇಡ. ಯಾವುದು ಇಲ್ಲವೋ ಅದರ ಬಗ್ಗೆ ಯೋಚಿಸುತ್ತಾ ಸಮಯ ವ್ಯರ್ಥಮಾಡುತ್ತೇವೆ. ಆಗ ನಮ್ಮ ಜೀವನದ ಅನೇಕ ಗಂಟೆಗಳು ಸವೆಯುತ್ತಾ ಸಾಗುತ್ತವೆ. ಒಮ್ಮೆ ಯೋಚಿಸಿ, ನಾವು ಕಳೆದ ಒಂದು ಕ್ಷಣವೂ ನಮ್ಮ ಜೀವನದಲ್ಲಿ ಎಂದೂ ಮರಳಿ ಬರುವುದಿಲ್ಲಜೀವನದಲ್ಲಿ ಯಾವುದನ್ನೂ ಅತೀ ಪರೀಕ್ಷಿಸಬಾರದು ಹಾಗೆ ಮಾಡಿದಾಗ ಅದರಲ್ಲಿ ನಮಗೆ ತಪ್ಪು ಕಾಣುತ್ತದೆ. live it as it is.

ಹೀಗಿರುವಾಗ ಯಾಕೆ ಇಲ್ಲದರ ಬಗ್ಗೆ ಯೋಚಿಸಿ, ಬದುಕನ್ನು ಸವೆಸುವುದರಲ್ಲಿ ಮಗ್ನರಾಗಿದ್ದೇವೆ. ಇದರೊಂದಿಗೆ ಇನ್ನೊಂದು ಅಂಶವನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಕೊಂಡರೆ ಇನ್ನೂ ಆನಂದಮಯವಾಗುತ್ತದೆ ಈ ನಮ್ಮ ಬದುಕು. ನಾಲ್ಕು ಜನರಿಗೆ ಸಮರ್ಪಿತ ಜೀವನ ನಮ್ಮದಾಗಬೇಕು. ಇನ್ನೊಬ್ಬರ ಸಂತೋಷದಲ್ಲಿ ನಮ್ಮ ಸಂತೋಷವನ್ನು ಕಂಡಾಗ ನಿಜವಾಗಿ ಈ ಜೀವನ ಆನಂದಮಯ ಆಗುತ್ತದೆ.

ಬದುಕಿನ ಪ್ರತೀ ದಿನವೂ ನನ್ನ ಕೊನೆಯ ದಿನವೆಂದು ಅಂದುಕೊಂಡರೆ, ನಮ್ಮ ಗುರಿ ಇನ್ನು ಹತ್ತಿರವಲ್ಲವೇ? ಗುರಿ ಮುಟ್ಟಲು ಅಂತರ ತುಂಬ ಇರಬಹುದು, ಆದರೆ ಆ ಅಂತರವನ್ನು ಕ್ರಮಿಸುವ ಮಧ್ಯೆ ಇರುವ ಬದುಕನ್ನು ಹೇಗೆ ಬಾಳುತ್ತೇವೆ ಎಂಬುದೇ ಬದುಕಿನ ಮಹತ್ವ.

ಬರದಿರುವುದರ ಎಣಿಕೆಯಲಿ, ಬಂದಿರುವುದರ ಮರೆಯದಿರು
ಗುರುತಿಸು ಒಳ್ಳೆಯದನು ಕೆಡುಕುಗಳ ಮಧ್ಯೆ |
ಬಂದ ಭಾಗ್ಯವ ನೆನೆ ಬಾರದೆನ್ನುವುದ ಬಿಡು
ಹರುಷಕದೆ ದಾರಿ ಮಂಕುತಿಮ್ಮ ||
ಈ ಸಾಲುಗಳು ನಮ್ಮ ಜೀವನಕ್ಕೂ ಅನ್ವಯವಾಗಬಾರದೇಕೆ?

Sunday, January 10, 2010

ತಪ್ಪು ಮೊದಲು, ಸರಿ ಮತ್ತೆ.....!!!!

ಇದೇನು ತಪ್ಪು ಮೊದಲು, ಸರಿ ಮತ್ತೆ!! ಎನ್ನುವ ವಿಚಿತ್ರವಾದ ವಾದವನ್ನು ಮುಂದಿಡುತ್ತಿದ್ದೇನೆ ಎಂದು ಅಂದುಕೊಳ್ಳುತ್ತಿದ್ದೀರಾ? ಹೌದು ಇದೊಂದು ಮನುಷ್ಯ ಸಹಜ ಗುಣ. ಗುಣ ಎಲ್ಲರಲ್ಲೂ ಇದ್ದೇ ಇದೆ. ಅಂದರೆ ನಾವು ಸಹಜವಾಗಿ ಬೇರೊಬ್ಬರಲ್ಲಿ ಮೊದಲಿಗೆ ತಪ್ಪನ್ನು ಹುಡುಕುತ್ತೇವೆ.

ಉದಾಹರಣೆಗೆ ಒಂದು ಘಟನೆಯನ್ನು ಅವಲೋಕಿಸಿ:
ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ಆತ್ಮೀಯ ಸ್ನೇಹಿತರು. ಎಲ್ಲ ವಿಚಾರಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಬ್ಬ ಸ್ನೇಹಿತ ಒಂದು ನಾಯಿಯನ್ನು ಸಾಕಿದ್ದನು. ಅವನಿಗೆ ನಾಯಿಯ ವಿಶೇಷತೆಯನ್ನು ತನ್ನ ಸ್ನೇಹಿತನಿಗೆ ತೋರಿಸಬೇಕೆಂಬ ಮನಸ್ಸಾಯಿತು.
ಅವನನ್ನು ಒಂದು ನದೀತೀರಕ್ಕೆ ಕರೆದೊಯ್ದನು. ನಾಯಿಯ ಬಗ್ಗೆ ವಿವರಿಸುತ್ತಾ ``ನೋಡು ಮಿತ್ರಾ, ನನ್ನ ನಾಯಿಯಲ್ಲಿ ಒಂದು ವಿಶೇಷ ಗುಣ ಇದೆ, ಅದು ಏನು ಅಂತ ನೀನೇ ಹೇಳು'' ಎಂದು, ಒಂದು ಕಟ್ಟಿಗೆಯ ತುಂಡನ್ನು ನೀರಿಗೆ ಎಸೆದು ನಾಯಿಗೆ ತರಲು ಹೇಳಿದ. ನಾಯಿ ನೀರಿನ ಮೇಲೆ ಓಡುತ್ತ ಹೋಗಿ ಕಟ್ಟಿಗೆಯ ತುಂಡನ್ನು ತಂದಿತು. ಆತ ಸ್ನೇಹಿತನಿಗೆ ಕೇಳಿದ, ``ಏನಾದರು ವಿಶೇಷ ಗುಣ ಗೊತ್ತಾಯ್ತಾ?'' ಎಂದು. ಸ್ನೇಹಿತನಿಗೆ ಗೊತ್ತಾಗಲಿಲ್ಲ. ಹಾಗಾದರೆ ಇನ್ನೊಮ್ಮೆ ನೋಡು ಎಂದು ಮತ್ತೆ ಹಾಗೇ ಮಾಡಿದ, ಆಗಲೂ ಮಿತ್ರನಿಗೆ ಗೊತ್ತಾಗಲಿಲ್ಲ. ``ಛೆ! ಗೊತ್ತಾಗಲಿಲ್ವೆ? ಇನ್ನೊಮ್ಮೆ ಗಮನವಿಟ್ಟು ನೋಡು ಎಂದು ಮೊದಲಿನ ಹಾಗೆ ನೀರಲ್ಲಿ ಕಟ್ಟಿಗೆ ಎಸೆದ, ಮತ್ತೆ ನಾಯಿ ನೀರಿನ ಮೇಲೆ ಓಡಿ ಕಟ್ಟಿಗೆಯ ತುಂಡನ್ನು ತಂದಿತು. ಮತ್ತೆ ಕೇಳಿದಾಗ ಮಿತ್ರ ಹೇಳಿದ ``ಹಾಂ! ಗೊತ್ತಾಯ್ತು ನಿನ್ನ ನಾಯಿಗೆ ನೀರಿನಲ್ಲಿ ಈಜಲು ಬರುವುದಿಲ್ಲ.'' ಎಂದ. ವಾಸ್ತವವಾಗಿ ಅದು ನೀರಿನ ಮೇಲೆ 'ಓಡುತ್ತದೆ' ಎಂಬುದು ಅದರ ಒಂದು ವಿಶೇಷತೆಯಾಗಿತ್ತು. ಅಂಥ ವೇಗವಿತ್ತು ಅದರಲ್ಲಿ. ಆದರೆ ಆತನಿಗೆ ಇದು ತಿಳಿಯದೇ ಹೋಯಿತು. ಅದರಲ್ಲಿದ್ದ ನ್ಯೂನತೆಯೇ ಕಂಡಿತು!

ನಮ್ಮ ಜೀವನದಲ್ಲಿ ಇನ್ನೊಬ್ಬರ ಒಳ್ಳೆಯ ಗುಣವನ್ನು ಗುರುತಿಸುವ ಸ್ವಭಾವವನ್ನು ಅಳವಡಿಸಿಕೊಂಡಾಗ ಜಗತ್ತೇ ನಮಗೆ ಒಳ್ಳೆಯದಾಗಿ ಕಾಣುತ್ತದೆ. ಆದರೆ ನಾವು ಪ್ರಯತ್ನದತ್ತ ಸಾಗುತ್ತಿಲ್ಲ. ಇಂದಿನ ಟಿ.ವಿ. ಸುದ್ದಿವಾಹಿನಿಗಳಲ್ಲಿ, ಹಾಗೆಯೇ ಸಂಜೆ ಪತ್ರಿಕೆಗಳಲ್ಲಿ ಒಳ್ಳೆಯ ವಿಷಯಗಳು ಬಹಳ ಕಡಿಮೆ ನೋಡಲು ಸಿಗುತ್ತವೆ. ಕೇವಲ ಜನರ ತಪ್ಪುಗಳು, ವ್ಯಕ್ತಿಯ ತಪ್ಪುಗಳು. ಹೀಗೆ ಅಂತೂ ತಮ್ಮ ತಪ್ಪು ಗೊತ್ತಾಗದಿದ್ದರೂ ಇನ್ನೊಬ್ಬರ ತಪ್ಪನ್ನು ಏನೋ ದೊಡ್ಡ ಸಾಧನೆ ಮಾಡಿದವರ ಹಾಗೆ ಹೇಳಿಕೊಳ್ಳುವುದರಲ್ಲಿ ಸಂತೋಷಪಡುವ ಅನೇಕರು ಇಂದು ಕಾಣಸಿಗುತ್ತಾರೆ.

ಒಟ್ಟಾರೆ ಹೇಳುವುದಾದರೆ ಒಳ್ಳೆಯತನ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗೇ ಕೆಟ್ಟದ್ದೂ ಇರುತ್ತದೆ. ಆದರೆ ನಾವು ಗುರುತಿಸುವಾಗ ಒಳ್ಳೆಯದನ್ನು ಮೊದಲು ಗುರುತಿಸೋಣ. ಮತ್ತೆ ನಿಧಾನಕ್ಕೆ ಅವರಲ್ಲಿನ ತಪ್ಪುಗಳನ್ನು ತಿಳಿಹೇಳಿ, ನಮ್ಮಿಂದಾದಷ್ಟು ಸರಿಪಡಿಸಲು ಪ್ರಯತ್ನಿಸೋಣ. ತಿದ್ದಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟದ್ದು.

Tuesday, January 5, 2010

ಜಾಹೀರಾತುಗಳ ಮಾರಕ ದೃಷ್ಟಿಕೋನ

ಇಂದು ನಾವು ಜಾಹೀರಾತುಗಳನ್ನು ಎಲ್ಲಿ ನೋಡಿದರಲ್ಲಿ ಕಾಣುತ್ತಿದ್ದೇವೆ. ಜಾಹೀರಾತುಗಳು ಈ ಹಿಂದೆಯೂ ಇದ್ದವು. ಮುಂಚಿನ ಕಾಲದಲ್ಲಿ ಜಾಹೀರಾತಿನ ರೂಪ ಭಿನ್ನವಾಗಿತ್ತು. ಅಂದರೆ ರಾಜ ಮಹಾರಾಜರು ಒಂದು ವಿಷಯವನ್ನು ಜನರಿಗೆ ತಲುಪಿಸಲು ಊರು-ಊರಿಗೆ ಸೈನಿಕರನ್ನು ಕಳುಹಿಸಿ ಡಂಗುರ ಹೊಡೆಸುವುದು, ಬೀದಿ ನಾಟಕಗಳನ್ನಾಡಿಸುವುದು - ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಿದ್ದರು.

ಕಾಲಕ್ರಮೇಣ ಈ ದೇಶದ ಮೇಲೆ ಆಂಗ್ಲರ ಆಕ್ರಮಣದಿಂದ ಇಂತಹ ಅನೇಕ ಪದ್ಧತಿಗಳು ಇಲ್ಲವಾದವು. ಅವುಗಳೆಲ್ಲ ಪಾಶ್ಚಿಮಾತ್ಯರ ಕೈಗೆ ಸಿಕ್ಕು ಯಾಂತ್ರಿಕತೆಯನ್ನು ಪಡೆದುಕೊಂಡವು. ಇದೇ ರೀತಿ ಮುಂದುವರೆದು ಈಗ ಬೃಹತ್ ಉದ್ಯಮವಾಗಿ ಇಂದು ಜಾಹೀರಾತುಗಳು ಬೆಳೆದು ನಿಂತಿವೆ.

ಜಾಹೀರಾತುಗಳಿಂದ ಆಗುವ ಪರಿಣಾಮಗಳನ್ನು ಒಂದೊಂದಾಗಿ ನೋಡುತ್ತ ಹೋದರೆ ಉಪಯೋಗಕ್ಕಿಂತ ಮಾರಕವಾದ ವಿಚಾರಗಳೇ ಹೆಚ್ಚು. ಅದಕ್ಕೆ ಪೂರಕವಾಗಿ ದೃಶ್ಯ ಮಾಧ್ಯಮ. ಇಂದು ನಾವು ಸಾವಿರಾರು ಚಾನೆಲ್‌ಗಳನ್ನು ದೂರದರ್ಶನದಲ್ಲಿ ನೋಡುತ್ತೇವೆ. ಎಲ್ಲ ರೀತಿಯ ಉತ್ಪನ್ನಗಳಿಗೆ ಜಾಹೀರಾತುಗಳಿವೆ. ದೂರದರ್ಶನದಲ್ಲಿ ತೋರಿಸುವ ಜಾಹೀರಾತುಗಳ ಪರಿಣಾಮವಂತೂ ಹೇಳತೀರದು. ಇವುಗಳ ಹಿಂದೆ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶವಿದೆಯೋ ಅಥವಾ ಯುವಕರನ್ನು ತಪ್ಪು ದಾರಿಗೆ ಕರೆದುಕೊಂಡು ಹೋಗುವ ಉದ್ದೇಶವಿದೆಯೋ ತಿಳಿಯದು.

ಎಷ್ಟೋಬಾರಿ ಮನೆಯಲ್ಲಿ ಕುಟುಂಬದ ಎಲ್ಲರೂ ಕುಳಿತು ಟಿವಿ ನೋಡುವ ಸಂದರ್ಭದಲ್ಲಿ ಮಕ್ಕಳು ಜಾಹೀರಾತನ್ನು ನೋಡುತ್ತ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಉತ್ಪನ್ನಗಳು ಯಾವುದೇ ಇರಲಿ ಎಲ್ಲ ಜಾಹೀರಾತುಗಳಲ್ಲಿ ತುಂಡು ಬಟ್ಟೆ ತೊಟ್ಟ ಹುಡುಗಿಯಂತೂ ಕಾಣಸಿಗುತ್ತಾಳೆ. ಆ ಜಾಹೀರಾತು ಗಡ್ಡ ತೆಗೆಯುವ ಬ್ಲೇಡಿರಬಹುದು, ಅಥವಾ ಇನ್ಯಾವುದೋ ಇರಬಹುದು. ಆದರೆ ಎಲ್ಲದರಲ್ಲೂ ಇವರು ಇರಲೇಬೇಕು. ವಸ್ತುವಿಗೆ ಹುಡುಗಿಯರಿಗೆ ಸಂಬಂಧವಿಲ್ಲದಿದ್ದರೂ ತೋರಿಸುವುದು ಮಾತ್ರ ಅವರನ್ನೇ.

ಅದೇ ರೀತಿ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು ತಮ್ಮ ವೃತ್ತಿಗಿಂತ ಹೆಚ್ಚಿನ ಸಂಪಾದನೆ ಈ ಜಾಹೀರಾತುಗಳ ಮುಖಾಂತರ ಮಾಡುತ್ತಿದ್ದಾರೆ. ಈ ನಾಯಕರನ್ನೇ ಜೀವನದ ಆದರ್ಶ ಎಂದು ನಂಬಿರುವ ಅನೇಕ ಯುವಕ-ಯುವತಿಯರು ಅವರು ಬಳಸುವ ಸಾಬೂನು, ಬಟ್ಟೆ, ಬೈಕ್ ಹೀಗೆ...... ಅಂತೂ ಅವರ ಅನುಕರಣೆ ಮಾಡಿಯೇ ಮಾಡುತ್ತಾರೆ. ಈ ಉದ್ದೇಶದಿಂದಲೇ ಇವರನ್ನು ಜಾಹಿರಾತುಗಳಲ್ಲಿ ತೋರಿಸಲಾಗುತ್ತದೆ. ಹೀಗೆ ಜನರಿಗೆ ಎಷ್ಟು ಮೋಸ ಮಾಡಲು ಸಾಧ್ಯ ಅಷ್ಟು ಮೋಸದ ಜಾಲವನ್ನು ಲೀಲಾಜಾಲವಾಗಿ ಬೀಸುತ್ತಾರೆ.


ಹಾಗಾದರೆ ಜಾಹೀರತು ಬೇಡವೆ? ಖಂಡಿತಾ ಬೇಕು. ಆದರೆ ತೋರಿಸುವ ವಿಧಾನವನ್ನು ಸರಿಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಮತ್ತು ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎನ್ನುವುದರ ಅರಿವೂ ಬೇಕಾಗುತ್ತದೆ. ಜಾಹೀರಾತಿನಿಂದ ಉತ್ನಗಳ ಮಾರಾಟವಾಗಬೇಕೆ ಹೊರತು ಅದರಿಂದ ಯುವಜನರಿಗೆ, ಮಕ್ಕಳಿಗೆ ಮಾರಕವಾದ, ನಮ್ಮ ಸಂಸ್ಕೃತಿಗೆ ಬೇಡವಾದ ಸಂದೇಶವಂತೂ ಹೋಗಬಾರದೆನ್ನುವುದೇ ಉದ್ದೇಶ.